ಕೊಲೆಯೊಂದರ ಸುತ್ತ ಮುತ್ತ ನಡೆಯುವ ಥ್ರಿಲ್ಲರ್ ಜರ್ನಿಯನ್ನು ಹೇಳುವ ಯದಾ ಯದಾ ಹಿ ಈವಾರ ಬಿಡುಗಡೆಯಾಗಿದೆ. ನಾಯಕಿ ಪ್ರಿಯಾಂಕ ಶೆಟ್ಟಿ (ಹರಿಪ್ರಿಯ) ಇಡೀ ಕಥೆಯ ಕೇಂದ್ರಬಿಂದು. ಈ ಪಾತ್ರದ ಸುತ್ತಲೂ ಒಂದಷ್ಟು ಪಾತ್ರಗಳು ಬಂದು ಹೋಗುತ್ತವೆ. ಶ್ರೀಮಂತಿಕೆ ವಿಲಾಸಿ ಜೀವನದ ದುರಾಸೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋಗಿ ಕೊಲೆಯ ಮೇಲೆ ಕೊಲೆ ಮಾಡುತ್ತ ಸಾಗುವ ಹೆಣ್ಣಿನ ಕಥೆ ಈ ಚಿತ್ರದಲ್ಲಿದೆ. ಆದಿತ್ಯ ವರ್ಮ(ವಸಿಷ್ಠ ಸಿಂಹ) ಒಬ್ಬ ಮುಂಗೋಪಿ ಪೊಲೀಸ್ ಅಧಿಕಾರಿ, ಇದಕ್ಕೂ ಮೊದಲು ಪ್ರಿಯಾಂಕಾಳ ಆತ್ಮೀಯ ಗೆಳೆಯ. ಶ್ರೀಮಂತ ಉದ್ಯಮಿಯನ್ನು ಮದುವೆಯಾದ ಪ್ರಿಯಾಂಕ ಆತನೊಬ್ಬ ಗೇ ಎಂದು ಆರಂಭದಲ್ಲೇ ಗೊತ್ತಾದರೂ ಸಹಿಸಿಕೊಂಡು ಜೊತೆಗಿರುತ್ತಾಳೆ. ಆಕೆಯ ಜೀವನದಲ್ಲಿ ಮತ್ತೆ ಆದಿತ್ಯ ಎಂಟ್ರಿಯಾದಾಗ, ಒಂಟಿಯಾಗಿದ್ದ ಪ್ರಿಯಾಂಕಳಿಗೆ ಆಸರೆ ಸಿಕ್ಕಂತಾಗುತ್ತದೆ. ಆದರೆ ಇಲ್ಲಿಂದ ಪ್ರಿಯಾಂಕಳಿಗೆ ಒಂದೊಂದೇ ಸಂಕಷ್ಟಗಳು ಎದುರಾಗುತ್ತವೆ. ಒಮ್ಮೆ ಅವಿನಾಶ್ ಭಟ್ (ಅವಿನಾಶ್ ) ಅವರಿಂದ ದೊಡ್ಡ ಮೊತ್ತದ ಪ್ರಾಪರ್ಟಿ ಖರೀದಿಸಲೆಂದು ಆ ಮನೆಗೆ ಬಂದಾಗ ಆಕಸ್ಮಿಕವಾಗಿ ಅವರನ್ನೇ ಕೊಲೆ ಮಾಡಬೇಕಾಗುತ್ತದೆ. ಒಂದು ಹಂತದಲ್ಲಿ ಆದಿತ್ಯನನ್ನೇ ಕೊಲೆ ಮಾಡುವ ಹಂತಕ್ಕೂ ಪ್ರಿಯಾಂಕ ತಲುಪುತ್ತಾಳೆ. ಈ ಮರ್ಡರ್ ಕೇಸ್ ನಿಂದ ಪ್ರಿಯಂಕಳನ್ನು ಪಾರು ಮಾಡಲು ಯುವ ಪೊಲೀಸ್ ಅಶೋಕ್ (ದಿಗಂತ್) ಆಗಮನವಾಗಿ, ಆತ ಬಂದು ಕಥೆಯ ದಿಕ್ಕನ್ನೇ ಬದಲಿಸುತ್ತಾನೆ. ಎರಡೂ ಕೊಲೆಗಳ ಮೂಲ, ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಅಷ್ಟಕ್ಕೂ ಈ ಅಶೋಕ್ ಯಾರು, ಆತನ ಹಿನ್ನೆಲೆ ಏನು ಎಂದು ಗೊತ್ತಾಗುವುದೇ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. ಅಲ್ಲಿವರೆಗೆ ಕುತೂಹಲ ಕಾಯ್ದುಕೊಂಡು ಹೋಗುವಲ್ಲಿ ನಿರ್ದೇಶಕ ಅಶೋಕ್ ತೇಜ ಯಶಸ್ವಿಯಾಗಿದ್ದಾರೆ.
ಹಿರಿಯನಟ ಅವಿನಾಶ್ ಚಿತ್ರದಲ್ಲಿ ಪ್ರಾಪರ್ಟಿ ಮಾಲೀಕನಾಗಿ ಅಭಿನಯಿಸಿದ್ದಾರೆ. ತೆಲುಗು ವರ್ಷನ್ನಲ್ಲಿ ನಟಿ ರೆಜಿನಾ ಅವರು ನಿರ್ವಹಿಸಿದ್ದ ಪಾತ್ರವನ್ನು, ಇಲ್ಲಿ ಹರಿಪ್ರಿಯಾ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಈವರೆಗೂ ಮಾಡಿರದಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ರಾಜೇಶ್ ಅಗರವಾಲ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಕೇರಳದ ಮನ್ನಾರ್ ನ ಸುಂದರ ಲೊಕೇಶನ್ ಗಳನ್ನು ಛಾಯಾಗ್ರಾಹಕ ಯೋಗಿ ಸೆರೆಹಿಡಿದಿದ್ದಾರೆ. ತೆಲುಗಿನಲ್ಲಿ ಎವುರು ಶಿರ್ಷಿಕೆಯಡಿ ನಿರ್ಮಾಣವಾಗಿದ್ದ ಚಿತ್ರವೇ ಈಗ ಯದಾ ಯದಾಹಿ ಆಗಿ ತೆರೆಗೆ ಬಂದಿದೆ.
ನಟ ವಸಿಷ್ಟ ಸಿಂಹ ಸ್ವಲ್ಪನೆಗೆಟಿವ್ ಶೇಡ್ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ದಿಗಂತ್ ಅವರ ಪಾತ್ರ ಸಿಕ್ರೇಟ್, ಅದನ್ನು ಥೆಟರಿನಲೇ ವೀಕ್ಷಿಸಬೇಕು. ಯಾವುದೇ ಪಾತ್ರವನ್ನೂ ವಿಜೃಂಭಿಸದೆ ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಳ್ಳುವ ಮೂಲಕ ನೈಜತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.